Friday, July 30, 2010

ನನಗ್ಯಾಕೆ ಸಿನೆಮಾದ ಗುಂಗು?

ರೂಪ ರಾಜೀವ್

ನನಗೆಂದೂ ಸಿನೆಮಾ ಅಷ್ಟೊಂದು ಎಫೆಕ್ಟಿವ್ ಅನ್ನಿಸಿರಲೇ ಇಲ್ಲ. ಯಾವಾಗಲೋ ಒಮ್ಮೆ ಹಿಂದಿ ಸಿನೆಮಾಗಳ ಸಿಡಿ ತಂದು ಮನೆಯಲ್ಲಿ ನೋಡಿಬಿಟ್ಟರೆ ಮುಗಿಯಿತು. ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದಷ್ಟೆ.


‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು.


ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೆ ಇದರ ಹುಳುಕುಗಳು ಕಂಡಾಗ, ಇವರಿಗೆಲ್ಲಾ ಗೊತ್ತಾಗುವುದಿಲ್ಲವೇ? ಇವರೆಲ್ಲಾ ಏಕೆ ಹೀಗೆ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.


ಹೀಗಿದ್ದ ನಾನು, ಸಿನೆಮಾ ಮೇಕಿಂಗ್ ನ ಗಂಧಗಾಳಿಯೂ ಇಲ್ಲದ, ಇಂತಹ ನಾನು ಈ ಸಿನೆಮಾದ ಗುಂಗು ಹಿಡಿಸಿಕೊಂಡಿದ್ದು ಹೇಗೆ? ಏಕೆ?


ಶೇಖರ್ ಪೂರ್ಣರವರನ್ನು ಭೇಟಿ ಮಾಡುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ ಬಹಳವಾಗಿ ಹಿಡಿಸಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ಅದುವರೆವಿಗೂ ಸಿನೆಮಾ ಅನ್ನೋದು ಮನರಂಜನೆಗಾಗಿ ಮಾತ್ರ ಅನ್ನುವ ಅನಿಸಿಕೆ ನನ್ನಲ್ಲಿ ಬಲವಾಗಿತ್ತು. ನಮ್ಮ ಸಿನೆಮಾಗಳು ಎಷ್ಟು ಕಮರ್ಷಿಯಲೈಸ್ ಆಗಿಬಿಟ್ಟಿವೆ, ನಿರ್ಮಾಪಕನೊಬ್ಬ ಹೆಸರಾಂತ ನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾನೆ. ಮೊದಲಿಗೆ ನಟ / ನಟಿಯರನ್ನು ಗೊತ್ತು ಮಾಡಿಕೊಂಡು, ಅವರಿಗೆ ಸೂಕ್ತವಾದಂತಹ ಅದೇ ಹಳೆಯ ಫಾರ್ಮುಲಾ ಉಳ್ಳ ಕಥೆಗಳು! ಮಚ್ಚು, ಲಾಂಗ್, ಐಟಮ್ ಸಾಂಗ್, ಒಂದೇ ರೀತಿಯ ಕ್ಯಾಮೆರಾ ವರ್ಕ್, ಎಲ್ಲವೂ ಸ್ಟಿರಿಯೋ ಟೈಪ್ಡ್. ಯಾವುದಾದರೊಂದು ಸಿನೆಮಾ ಯಶಸ್ವಿಯಾಗಿ ಓಡಿಬಿಟ್ಟರೆ, ಅದೇ ಧಾಟಿಯುಳ್ಳ ಹಲವಾರು ಸಿನೆಮಾಗಳು...


ಇದೆಲ್ಲಾ ನಮ್ಮ ಮೊದಲ ಭೇಟಿಯಲ್ಲಿ ಚರ್ಚೆಯಾದಂತಹ ವಿಷಯಗಳು. ಬೇರೆ ಎಲ್ಲಾ ಭಾಷೆಗಳಲ್ಲಿಯೂ ಸಿನೆಮಾಗಳಲ್ಲಿ ಅಷ್ಟೊಂದು ಪ್ರಯೋಗ ನಡೀತಿರಬೇಕಾದರೆ, ಏಕೆ ನಮ್ಮ ಕನ್ನಡ ಸಿನೆಮಾ ಆ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾ ಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ. ಒಬ್ಬ ವ್ಯಕ್ತಿ ಸಿನೆಮಾ ನೋಡಲು ಸುಮಾರು ೧೦೦ ರೂಗಳನ್ನು ಕೊಟ್ಟು ನೋಡುತ್ತಾನೆಂದರೆ, ಅದನ್ನು ನಾವು ಬರೇ ಮನರಂಜನೆ ಕೊಡುವ ಉದ್ದೇಶ ಇಟ್ಟುಕೊಂಡ್ರೆ ಸಾಲದು. ನಮಗೆ ಆ ಒಬ್ಬೊಬ್ಬ ವ್ಯಕ್ತಿಯ ೧೦೦ ರೂ.ಗಳ ಜವಾಬ್ದಾರಿಯ ಅರಿವಿರಬೇಕು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಇದು ಅವರ ಆಶಯವಾಗಿತ್ತು.


ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.


No comments:

Post a Comment

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ