Monday, September 19, 2011

ಲೈಫು ಇಷ್ಟೇನೆ: ನನ್ನ ರೀಡಿಂಗ್

ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೇ ಸಿನೆಮ ನನಗೆ ಮೆಚ್ಚುಗೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಈ ಬರಹವನ್ನು ಸಿನೆಮ ವಿಮರ್ಶೆಯಾಗಿಸದೆ ಸಿನೆಮವನ್ನು ನಾನು ಓದಿಕೊಂಡ (ಹೌದು ಓದಿಕೊಂಡ) ಬಗೆಯನ್ನು ವಿವರಿಸಲು ಬಳಸುವೆ.

೧. ಯೋಗರಾಜ್ ಭಟ್ಟರ ಗರಡಿಯಲ್ಲಿ ಬೆಳೆದು ನಿರ್ದೇಶಕರಾದರೂ ಪವನ್ ಕುಮಾರ್ ಯೋಗರಾಜ್ ಭಟ್ಟರು ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಸಿನೆಮ ಮಾಡುವ ಹಳೆ ತಲೆಮಾರಿನ ನಿರ್ದೇಶಕರು ಎಂದು ಸಾಬೀತು ಪಡಿಸಿದ್ದಾರೆ. ಚಿತ್ರಕತೆಯಲ್ಲಿ ಅವರು ತೊಡಗಿಸಿರುವ ಶ್ರದ್ಧೆ ಅಪಾರ. ಬುದ್ಧಿವಂತಿಕೆಯ ಮಾತುಗಾರಿಕೆ, ಕಚಗುಳಿಯಿಡುವ ಡೈಲಾಗುಗಳು, ನವಿರೆನಿಸುವ ದೃಶ್ಯ ಸಂಯೋಜನೆಗಳಲ್ಲಿ ಸಿನೆಮ ತೂಗಿಸುವ ಭಟ್ಟರ ಕೆಲವೇ ಕೆಲವು ದೌರ್ಬಲ್ಯಗಳ ನೆರಳೂ ಪವನ್ ಸಿನೆಮಾದ ಮೇಲೆ ಬಿದ್ದಿಲ್ಲ.

ಕೊಚ್ಚೆಗುಂಡಿಯಲ್ಲಿ ಪ್ರಾರಂಭವಾದ ಪ್ರೀತಿ ಜೋಗದ ಗುಂಡಿಯಲ್ಲಿ ಮಣ್ಣಾಗುವ ಮುಂಗಾರು ಮಳೆ, ನೀರಿನ ಸೆಳವಿನಲ್ಲಿ ಕೈ ಹಿಡಿದು ಒಂದಾಗುವ, ಗೇಲಿ ಮಾಡಿ ನಗುವ ಬೀದಿಯ ಜನದ ನಡುವೆ ಕೈ ಹಿಡಿದು ನಡೆವ ಗಾಳಿ ಪಟ- ಮನಸಾರೆ, ಪ್ರೀತಿ ಪ್ರೇಮ, ಮದುವೆ ಮಕ್ಕಳು ಸಂಸಾರ, ಅಪ್ಪ ಅಮ್ಮ ಎಲ್ಲವೂ ಏಕತ್ರವಾಗಿ ಕೇವಲ ವಸ್ತು'ಗಳು' ಆಗಿ ಕಾಣುವ ವೇದಾಂತದ ಕಣ್ಣಿರುವ ನಾಯಕ, ನೂರು ಮಂದಿ ಹುಡುಗರ ಪ್ರಪೋಸಲ್ ಪಡೆದು ಮತ್ತೊಮ್ಮೆ ಡಿಟೇಲ್ ಆಗಿ ಲವ್ ಮಾಡುವ ವ್ಯವಧಾವಿಲ್ಲದೆ ಮದುವೆಗೆ ಪ್ರಪೋಸ್ ಮಾಡುವ ಹುಡುಗಿಯರ ಪಂಚರಂಗಿ - ಹೀಗೆ ಭಟ್ಟರ ಸಿನೆಮಾಗಳಲ್ಲಿ ಹಾಗೂ ಹೀಗೂ ಹುಡುಗ ಹುಡುಗಿ ಒಂದಾಗಿಯೇ ಆಗುತ್ತಾರೆ. ಸಂತೆಯೆಲ್ಲ ಸುತ್ತಿ ಬಂದು ಕಾಲು ತೊಳೆದು ಮನೆ ಸೇರಿಕೊಂಡಂತೆ. ಆದರೆ ಈ ತಲೆಮಾರಿನ ತಲ್ಲಣಗಳ ಪ್ರತ್ಯಕ್ಷ ಅನುಭವ ಇರಬಹುದಾದ ಪವನ್ ಕುಮಾರ್ ನಾಯಕ ನಾಯಕಿ ಒಂದಾಗುವುದು ಇಲ್ಲವೇ ಬೇರೆಯಾಗುವುದು ಮುಖ್ಯವೇ ಅಲ್ಲ ಎನ್ನುವಂತೆ ಸಿನೆಮ ಕಟ್ಟಿಕೊಡುತ್ತಾರೆ.

೨. ಸಿನೆಮದ ಧ್ವನಿ ಶಕ್ತಿ. ಸಂಭಾಷಣೆಯ ಆತ್ಮವಿಶ್ವಾಸದಲ್ಲಿ ಸಿನೆಮ ಸೋರಗದಂತೆ ನೋಡಿಕೊಂಡಿರುವುದು ಪವನ್ ಬಳಸಿರುವ ಹತ್ತಾರು ಸಜೇಶನ್ ಗಳ ಮೂಲಕ.ಇವುಗಳಲ್ಲಿ ಕೆಲವು ನಾನು ಗುರುತಿಸಿದಂತವು: ನಾಯಕನ ಏಕಾಂತದ ಖಾಸಗಿ ಕ್ಷಣಗಳಲ್ಲಿ ಕಾಣಿಸಿಕೊಳ್ಳುವ ನಾಲ್ಕು ಮಂದಿ. ನಾಯಕ ದುಃಖದಲ್ಲಿರುವಾಗ ಬೇಸರವಾಗುವ, ಗೊಂದಲದಲ್ಲಿದ್ದಾಗ ಸಂತೈಸುವ, ಕೆಲವೊಮ್ಮೆ  ಅವನ ಹುಡುಗಿಗೆ ದಾರಿ ತೋರಿಸುವ, ಇವನು ಖುಶಿಯಲ್ಲಿದ್ದಾಗ ವಯೋಲಿನ್ ನುಡಿಸುವ, ಪ್ಯಾಥೋ ಹಾಡುವಾಗ ತಲೆ ಒರಗಲು ಭುಜ ನೀಡುವ, ಜೂನಿಯರ್ ದೇವ್ ದಾಸನ ಹುಡುಗಿಯಾಗಿ ಬರುವ ಹೊಸ ಪ್ರೇಯಸಿಯ ಆಗಮನವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಆದರೆ ಇಡೀ ಸಿನೆಮದಲ್ಲಿ ಎಲ್ಲೂ ಒಂದೂ ಮಾತಾಡದ ಆ ನಾಲ್ಕು ಮಂದಿ. ಮುಂದೆ ನಾನು ಹೇಳಲಿರುವ ಎರಡನೆಯ ಸಜೆಶನ್ ಆಧಾರದಲ್ಲಿ ಹೇಳುವುದಾದರೆ ಈ ನಾಲ್ಕು ಮಂದಿ ವಯೋಲಿನ್ ನುಡಿಸುವ, ನೃತ್ಯ ಮಾಡುವ ಕಲಾವಿದರು. ಸಂಗೀತ, ನೃತ್ಯ ಎನ್ನುವ ಎಲಿಮೆಂಟುಗಳು ನಾಯಕನ ಖಾಸಗಿ ಕ್ಷಣಗಳನ್ನು ಆವರಿಸಿ ಸಂತೈಸುವ, ಸಂಭ್ರಮಿಸುವ ಪಾತ್ರಗಳಾಗುವವು.

ಎರಡನೆಯದು, ಸಿನೆಮಾದಲ್ಲಿ ಸಿನೆಮಗಳನ್ನು ಸಜೆಶನ್ ಗಳಾಗಿ ಬಳಸಿರುವುದು. ಇದು ಹೊಸ ತಂತ್ರವೇನಲ್ಲ. ಗಿರೀಶ್ ಕಾಸರವಳ್ಳಿ ತಮ್ಮ `ಮನೆ' ಚಿತ್ರದಲ್ಲಿ ಫ್ರೆಡ್ರಿಕೊ ಫೆಲಿನಿಯ "Eight and Half" ಚಿತ್ರದ ಮ್ಯೂಸಿಕ್ ಬಿಟ್ ಒಂದನ್ನು ಬಳಸುತ್ತಾರೆ. ಇಂತಹ ಪ್ರಯತ್ನ ಕೆಲವೊಮ್ಮೆ ಕೇವಲ ಪ್ರಭಾವವನ್ನು ನೆನೆಯುವಲ್ಲಿ, ಅರ್ಪಣೆಯಾಗಿಸುವಲ್ಲಿ ಬಳಕೆಯಾಗುತ್ತದೆ. ಆದರೆ ಚಿತ್ರಕತೆಯಲ್ಲಿ ಇವುಗಳು ಸಂವಾದ ನಡೆಸುವ ಅಂಶಗಳಾಗುವುದು ಲೈಫು ಇಷ್ಟೇನೆ ಚಿತ್ರಕಥೆಯ ಹೆಚ್ಚುಗಾರಿಕೆ. ಮೊದಲ ನಾಯಕಿ ಕೈ ಕೊಟ್ಟ ದುಃಖದಲ್ಲಿ ಆಕೆಯ ಫೊಟೊಗಳಿಗೆ ಅಪ್ಪ ಕೊಟ್ಟ ಲೈಟರಿನಲ್ಲಿ ಬೆಂಕಿ ಹೊತ್ತಿಸುವಾಗ ಹಿನ್ನೆಲೆಯ ಟಿವಿಯಲ್ಲಿ ಮುಂಗಾರು ಮಳೆಯ "ಇವನು ಗೆಳೆಯನಲ್ಲ" ದೃಶ್ಯ ಕಾಣಿಸುವುದು, ಗಣೇಶ್ ಪ್ರೀತಿಯನ್ನು ಮಣ್ಣು ಮಾಡಿ ತ್ಯಾಗ ಮಾಡಿದ ಉದಾತ್ತ ಭಾವದಲ್ಲಿ ಜೋಗದ ತುದಿಯಲ್ಲಿ ನಿಲ್ಲುವುದನ್ನು ಗೇಲಿ ಮಾಡುವಂತೆ ಈತ ನೆನಪುಗಳನ್ನು ಸುಡುವುದು, ಇವನನ್ನು ಬಿಟ್ಟು ಇನ್ನೊಬ್ಬನನ್ನು ಮದುವೆಯಾಗುವ ಹುಡುಗಿಯ ಹೆಸರು "ನಂದಿನಿ" ಯೇ (ಮುಂಗಾರು ಮಳೆ ನೆನಪಿಸಿಕೊಳ್ಳಿ) ಆಗಿರುವುದು ಆಕಸ್ಮಿಕವಲ್ಲ.

ಹುಡುಗಿ ಕೈಕೊಟ್ಟ ದುಃಖದಲ್ಲಿ ತಲೆ ಕೆಡಿಸಿಕೊಂಡವನನ್ನು ಗುಜರಿ ಅಂಗಡಿಯ 'ಅಜ್ಜ'ನ ಬಳಿಗೆ ಸೆಲೂನ್ ಅಂಗಡಿಯವನು ಕೊಂಡೊಯ್ಯುವುದು, ಅಜ್ಜ ನೆನಪು ಅಳಿಸುತ್ತೇನೆಂದು ಎಣ್ಣೆ ಮಾಲಿಶ್ ಮಾಡುವುದು ಒಂದು ಶಕ್ತಿಶಾಲಿ ಸಜೆಶನ್. ಇದರ ಅರ್ಥ ಗ್ರಹಿಸುವುದಕ್ಕೆ ನನಗೆ ಒಂದು ವೀಕ್ಷಣೆಯಲ್ಲಿ ಸಾಧ್ಯವಾಗಿಲ್ಲ.

೩. ಸಿನೆಮದ ಚಿತ್ರಕಥೆಯನ್ನು ಕಟ್ಟಿರುವ ಬಿಗಿ ಹಾಗೂ ಸಂಯಮ. ಸಿನೆಮವನ್ನು ವಿವರಿಸಿಬಿಡಬೇಕೆಂಬ ಧಾವಂತ ನಿರ್ದೇಶಕರಿಗಿಲ್ಲ. ಇಡೀ ಸಿನೆಮಾ ತುಂಬಾ ವ್ಯಕ್ತಿ, ವಿಚಾರಗಳಿಗೆಲ್ಲ 'ಗಳು' ಸೇರಿಸಿ ಸಂಬೋಧಿಸುವ ಪಂಚರಂಗಿಯ ನಾಯಕ ಸಿನೆಮಾದ ಅಂತ್ಯದಲ್ಲಿ ಇಡೀ ಸಿನೆಮಾದಲ್ಲಿರುವ ಈ ಸಜೆಶನ್ ಜನರಿಗೆಲ್ಲಿ ಅರ್ಥವಾಗದೆ ವ್ಯರ್ಥವಾಗುವುದೋ ಎನ್ನುವಂತೆ ಅದಕ್ಕೆ ಪೇಲವವಾದ ಅರ್ಥವಿವರಣೆಯನ್ನು ನೀಡುತ್ತಾನೆ. ಆದರೆ ಲೈಫು ಇಷ್ಟೇನೆ ನಲ್ಲಿ ಕುಣಿಯುವ, ವಯೋಲಿನ್ ನುಡಿಸುವ ವ್ಯಕ್ತಿಗಳು ಯಾರು, ನಂದಿನಿ ತಂದೆಗೆ ಹೆದರಿದಳಾ ಅಥವಾ ಕೆಲಸ ಸೇರಲು ಬಯಸದ ನಾಯಕನಿಂದ ಬೇಸತ್ತು ದೂರವಾದಳಾ, ಎರಡನೆಯದಾಗಿ ಬರುವ ನಾಯಕಿ ಯಾವ ಕಾರಣಕ್ಕೆ ತಂದೆಯನ್ನು ಬಿಟ್ಟು ಹೋಗಿರುತ್ತಾಳೆ?ಇಬ್ಬರು ಸೇರಿ ಅಪ್ಪನ ಸ್ಕೂಟರನ್ನು ತೊಳೆದಿರಿಸಿದ್ದು ಏಕೆ? ಕಡೆಗೆ ನಾಯಕ ಏನೆಂದು ತೀರ್ಮಾನಿಸುತ್ತಾನೆ ಎನ್ನುವ ಸಂಗತಿಗಳು ವಿವರಣೆಯ ಚಪ್ಪಡಿ ಕಲ್ಲು ಎಳೆಸಿಕೊಳ್ಳದೆ ಹಲವು ಬಗೆಯ ಇಂಟರ್ ಪ್ರಿಟೇಶ ಗಳಿಗೆ ತೆರೆದುಕೊಂಡಂತೆ ಇವೆ.

ಬಾಲ್ಯದಲ್ಲಿ ಆಕರ್ಷಣೆಯಾಗಿ ಮನಸ್ಸಲ್ಲಿ ನಾಟಿದ ಪೆಂಡ್ಯುಲಮ್ ನಂತೆ ಓಲಾಡುವ  ಜುಮುಕಿ, ಮುಂದೆಯೂ ಅವನ ಸ್ಮೃತಿ ಪಟಲದಲ್ಲಿ ಉಳಿಯುವುದು, ಜುಮುಕಿ ಕಾಣುವ ಮೊದಲ ಸೀನ್ ನಲ್ಲಿ ಟೀಚರ್ ಪೆಂಡುಲಮ್ ಬರೆಯುವುದು ಎಷ್ಟು ಅಪ್ರಯತ್ನ ಪೂರ್ವಕವಾಗಿ ಬೆರೆತು ಹೋಗಿವೆ! ಹಾಗೆಯೇ ನಾಯಕನ ಗೆಳೆಯ ನಾಯಕನ ಮನಸ್ಸು ಪಬ್ಲಿಕ್ ಟಾಯ್ಲೆಟ್ ಆಗಿದೆ ಎಂದು ಹೇಳುವ ಸನ್ನಿವೇಶ ಎಷ್ಟು ಸಹಜವಾಗಿ ಅವರಿಬ್ಬರು ಟಾಯ್ಲೆಟಿನಿಂದ ಹೊರ ಬಂದ ಸಂದರ್ಭದಲ್ಲಿ ಜರುಗುತ್ತದೆ! ಮೊದಲ ಹುಡುಗಿಯೊಂದಿಗಿನ ಡ್ಯುಯೆಟ್ ನಲ್ಲಿ ದಿಗಂತ್ ನಾಯಕಿಯ ಕಣ್ಣಿಗೆ ಮುತ್ತಿಟ್ಟರೆ ಎರಡನೆಯ ಹುಡುಗಿಯೊಂದಿಗೆನ ಡ್ಯುಯೆಟ್ ನಲ್ಲಿ ಸರಿಸುಮಾರು ಅದೇ ಕೆಮರಾ ಆಂಗಲ್ ನಲ್ಲಿ ಹುಡುಗಿ ದಿಗಂತ್ ಕೆಣ್ಣಿಗೆ ಮುತ್ತಿಡುತ್ತಾಳೆ  - ಇವೆಲ್ಲ ಸ್ಕ್ರೀನ್ ಪ್ಲೇ ಹಿಂದಿರುವ ಶ್ರದ್ಧೆಯನ್ನು ಬಿಂಬಿಸುತ್ತವೆ.

೪. ಇಡೀ ಸಿನೆಮ ಬೆನ್ನು ಮೂಳೆಯಿಲ್ಲದ, ಫುಟ್ ಬಾಲಿನಂತೆ ಒದೆಸಿಕೊಳ್ಳುತ್ತ ಜೀವನದ ಪಾಠ ಕಲಿಯುತ್ತ ಹೋಗುವ ಯುವಕ ತನ್ನ ಜೀವನವನು ನಿರೂಪಿಸುತ್ತಾ ಹೋಗುವ ಶೈಲಿಯಲ್ಲಿದೆ. ಹೀಗೆ ಆತನದೇ ನಿರೂಪಣೆಯಲ್ಲಿ ಚಿತ್ರ ಸಾಗುವುದು ದೊಡ್ಡ ಹೈಲೈಟ್. ಏಕೆಂದರೆ ಚಿತ್ರದ ನಿರೂಪಣೆಯಲ್ಲಿ  ನಾವು ಕಾಣುವ ಉಡಾಫೆ, ಬೇಜವಾಬ್ದಾರಿತನ, ಜಗತ್ತನ್ನು, ವ್ಯಕ್ತಿಗಳನ್ನು ನೋಡುವ ಕ್ರಮ ಎಲ್ಲ ನಾಯಕನ ದೃಷ್ಟಿಕೋನವಾಗಿ ಸಿನೆಮ ಅರ್ಥೈಸಿಕೊಳ್ಳುವುದಕ್ಕೆ ಹೊಸತೊಂದು ಆಯಾಮ ದೊರಕಿಸಿಕೊಡುತ್ತದೆ. ಇಲ್ಲವಾದರೆ ಉಡಾಫೆ, ಬೇಜವಾಬ್ದಾರಿತನ ನಿರ್ದೇಶಕ ಸಿನೆಮದ ಮೇಲೆ ಹೇರಿದ ವೈಯಕ್ತಿಕ `ಸ್ಟೈಲ್' ಆಗುತ್ತದೆ.

ಸಿನೆಮ ಹುಡುಗರ ವೀವ್ ಪಾಯಿಂಟ್ ನಲ್ಲಿದೆ ಅದಕ್ಕೆ ಹುಡುಗರಿಗೆಲ್ಲ ಇಷ್ಟವಾಗುತ್ತದೆ. ಹುಡುಗೀರ ವೀವ್ ಪಾಯಿಂಟ್ ನಿಂದ ಏನನ್ನು ತೋರಿಸಿಲ್ಲ ಎನ್ನುವ ಕೆಲವು ಅಭಿಪ್ರಾಯಗಳಿಗೆ ನಾಯಕನೇ ನಿರೂಪಕನಾಗಿರುವ ಅಂಶ ಉತ್ತರವಾಗಬಲ್ಲದು.

೫. ಪ್ರೀತಿ ಪ್ರೇಮದಲ್ಲಿ ಭಾವನೆಗಳ ಪಾತಳಿಯಾಗಿ ಬಳಕೆಯಾಗುವುದು ಹುಡುಗಿಯ ಮನಸ್ಸು. ಹುಡುಗ, ಗಂಡು ಹೊಡೆದಾಡಿ ರಕ್ಷಿಸುವ, ಇಲ್ಲ ಹೊಡೆದಾಡಿ ಪ್ರಾಣ ಕೊಡುವ, ಡಮ್ಮಿ ಪಾತ್ರವಷ್ಟೇ ಆಗಿರುತ್ತಾನೆ. ಅನೇಕ ವೇಳೆ ಗಂಡಸರು ಟಿಕೆಟ್, ಪಾಪ್ ಕಾರ್ನ್ ಕೊಂಡು ಪ್ರೇಯಸಿ/ಹೆಂಡತಿಯರನ್ನು  ಬೈಕಿನಲ್ಲಿ ಥಿಯೇಟರಿಗೆ ಕರೆದುಕೊಂಡು ಬರುವ ಡಮ್ಮಿ ಯಷ್ಟೇ ಆಗಿರುವುದರಿಂದ ಸಿನೆಮಾ ಪ್ರೀತಿಯನ್ನು ಹೆಣ್ಣಿನ ಅಂತರಂಗದ ಸಾಕ್ಷಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಸಿನೆಮಾದಲ್ಲಿ ಪ್ರೀತಿ ಎನ್ನುವುದನ್ನು ಹುಡಗರು ಗ್ರಹಿಸುವ, ವ್ಯಾಖ್ಯಾನಿಸಿಕೊಳ್ಳುವ, 'ಫೀಲ್ ಮಾಡುವ' ಬಗೆಯನ್ನು ಅನ್ವೇಷಿಸುತ್ತದೆ.

೬. ಸಿನೆಮ ನಾಯಕನ ಪ್ರೀತಿ, ವೈಫಲ್ಯಗಳನ್ನೇ ಕಥೆಯಾಗಿಸಿಕೊಂಡರೂ ಅದು ಮೂಲ ಕಥೆ ಎನ್ನಿಸುವುದೇ ಇಲ್ಲ. ಮೂಲ ಕಥೆಯಾಗಬಹುದಾದ ಗುಣ ಹೊಂದಿರುವುದು - ಗೆಳೆಯರ ಖರ್ಚನ್ನೆಲ್ಲ ಭರಿಸುವ ಎಂ ಎಲ್ ಎ ಮಗ,  ಹಳ್ಳಿಯ ಹಿನ್ನೆಲೆಯ, ಬಡತನದಲ್ಲಿಂದ ಬಂದ, ಎಂ ಎಲ್ ಎ ಮಗನನ್ನು ಲಜ್ಜೆಯಿಲ್ಲದೆ ಹೊಗಳುವ ಸತೀಶ್ ಪಾತ್ರ, ಮಧ್ಯಮ ವರ್ಗದ ನಾಯಕ - ಇವರ ಗೆಳೆತನ. ಬಿಲ್ಲು ಭರಿಸುತ್ತ, ಗೆಳೆಯರಿಗೆ ಸಹಾಯ ಮಾಡುತ್ತ ಇರುವ ಎಂ ಎಲ್ ಎ ಮಗ ಮುನ್ನೆಲೆಗೆ ಬರುವುದೇ ಇಲ್ಲ. ಆದರೆ ಸತೀಶ್ ಪಾತ್ರ ಹಾಗೂ ನಾಯಕ ಒಬ್ಬರ ಬದುಕನ್ನು ಮತ್ತೊಬ್ಬರು ವ್ಯಾಖ್ಯಾನಿಸುತ್ತ, ವಿಮರ್ಶಿಸುತ್ತ, ಮೌಲ್ಯ ಮಾಪನ ಮಾಡುತ್ತ, ನಿರ್ದೇಶಿಸುತ್ತ ಇರುತ್ತವೆ. ತೀರಾ ವರ್ಗ ಸಂಘರ್ಷದ ಥಿಯರಿ ಎಳೆದು ತರುವ ಅವಶ್ಯಕತೆ ಇಲ್ಲದಿದ್ದರೂ ಈ ರೀತಿ ಒಂದು ವರ್ಗ ಇನ್ನೊಂದು ವರ್ಗದೊಂದಿಗೆ ಸಂವಾದಿಯಾಗಲಿಕ್ಕೆ , ಒಬ್ಬನನ್ನು ಇನ್ನೊಬ್ಬನು ಪ್ರಾಣಕ್ಕಿಂತ ಹೆಚ್ಚು ಮೆಚ್ಚುವುದಕ್ಕೆ ನಗರ ಕೇಂದ್ರಿತ ಉನ್ನತ ಶಿಕ್ಷಣ, ಅದು ದೊರಕಿಸಿಕೊಟ್ಟ  ಉದ್ಯೋಗಗಳು ಕಾರಣವಾಗುವವೇ ಎನ್ನುವ ಕುತೂಹಲಕರ ಆಯಾಮ ಸಿನೆಮಾಗೆ ಒದಗಿ ಬರುತ್ತದೆ.

೭. ಇನ್ನು ಸಿನೆಮ ಹೇಳುವುದು ಏನನ್ನು? ಹೇಳಬೇಕಿರುವುದನ್ನು ಉಪಸಂಹಾರದ ಹಾಗೆ ಕಡೆಯಲ್ಲೇ ಹೇಳಬೇಕೆಂದಿಲ್ಲ. ಚಿತ್ರ ಕಡೆಯಲ್ಲಿ ಬದುಕನ್ನು ಪೂರ್ತಿಯಾಗಿ ಅನುಭವಿಸು ಎನ್ನುವ abstract ಸಂದೇಶ ನೀಡಿದಂತೆ ಕಾಣುತ್ತದೆ. ಆದರೆ ನೆನಪಿಡಿ ಇದು ಸಿನೆಮಾ ನಿರೂಪಿಸುತ್ತಿರುವ ನಾಯಕ ಇಡೀ ಕಥನಕ್ಕೆ ನೀಡುವ ಉಪಸಂಹಾರವಷ್ಟೇ ಆಗುವ ಸಾಧ್ಯತೆಯಿದೆ.

ನನಗೆ ಕಂಡಂತೆ ಸಿನೆಮ ಹೇಳುವುದು: ಆಧುನಿಕ ಸಮಾಜ ನಾಗರೀಕವಾಗುತ್ತ, ನಾಗರೀಕವಾಗುವ ಪ್ರಕ್ರಿಯೆಯನ್ನು ಸೂಕ್ಷ್ಮ, ಅತಿ ಸೂಕ್ಷ್ಮವಾಗಿಸುತ್ತಿದೆ. ಈ ನಾಗರೀಕತೆ ನಿರ್ಮಿಸುತ್ತಿರುವ ಯುವಕರು ಎಷ್ಟು ನಾಜೂಕೆಂದರೆ  ರಸ್ತೆ ಮಧ್ಯೆ ನಿಂತು ಎತ್ತರಿಸಿದ ದನಿಯಲ್ಲಿ ಜಗಳ ಆಡಲಾರರು, ಅವಾಚ್ಯ ಶಬ್ಧವನ್ನು ಬಳಸಲಿಕ್ಕೇ ಆಗದವರು, ಕೈ ಎತ್ತಿ ಯಾರನ್ನಾದರೂ ಹೊಡೆಯುವುದು ಎಂತಹ ಕೋಪದಲ್ಲೂ ಸಾಧ್ಯವಿಲ್ಲ.  ನಮ್ಮ ಪರಿಸರದಲ್ಲಿನ ಆಧುನಿಕ, ನಾಗರೀಕ ಎನ್ನಿಸುವ ವರ್ಗಕ್ಕೆ ಸೇರಿದ ಈ ನಾಯಕ (ಹಾಗೆ ನೋಡಿದರೆ ಪಂಚರಂಗಿಯ ಸಹೋದರರೂ) ವಿಪರೀತವಾಗಿ ನಾಗರೀಕರಾಗುತ್ತ ತಮ್ಮ ವ್ಯಕ್ತಿತ್ವದ ಮೂಲಭೂತವಾದ ಜೈವಿಕ (Biological) ಆಯಾಮವನ್ನೇ ಮರೆಯುತ್ತಿದ್ದಾರಾ?

ಈ ಒಳನೋಟವನ್ನು ದೊರಕಿಸಿಕೊಟ್ಟ ಪ್ರಸಂಗ ನಡೆದದ್ದು ಥಿಯೇಟರಿನಲ್ಲೇ. ಮೊದಲ ಹುಡುಗಿ ತಣ್ಣಗೆ ತನಗೆ ಇನ್ನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿದೆ ಎಂದಾಗ ನಾಯಕ ತನಗುಂಟಾಗುವ ಭಾವ ತಲ್ಲಣವನ್ನು ಸಿನೆಮಾಗಳಲ್ಲಿ ಕ್ಲೀಶೆಯಾಗುವಷ್ಟು  ಬಳಸಿರುವ ಜ್ವಾಲಾಮುಖಿ ಸ್ಪೋಟ, ಗುಡುಗು, ಸಮುದ್ರದ ಅಲೆಗಳನ್ನು ನೆನಪಿಸಿಕೊಳ್ಳುವುದರ ಮೂಲಕ ವ್ಯಾಖ್ಯಾನಿಸುತ್ತಾನೆ! (ಮುಂದೆ ತನಗೆ ಯಾವುದೂ ಫ್ರೆಶ್ ಅನ್ನಿಸುತ್ತಿಲ್ಲ ಎಲ್ಲವೂ ಸೆಕೆಂಡ್ ಹ್ಯಾಂಡ್ ಅನ್ನಿಸುತ್ತಿದೆ ಎನ್ನುವ ನಾಯಕನದು ಮುಗ್ಧತೆ ಬಹು ಬೇಗ ಬಿಟ್ಟುಕೊಟ್ಟ ಈ ತಲೆಮಾರಿನ ಹುಡುಗ ಹುಡುಗಿಯರ ತಲ್ಲಣವೇ ಆಗಿದೆಯೇ?) ಹಾಗೆ ಹೇಳುತ್ತ ಆಕೆ ಅದನ್ನು ಹೇಳಿದಾಗ ತನಗೆ ಕೋಪ ಬಂದರೂ ಅವಳನ್ನು ಬೈಯಬೇಕು ಅನ್ನಿಸಲಿಲ್ಲ ಎನ್ನುತ್ತಾನೆ. ಈ ಸಮಯಕ್ಕೆ ಸರಿಯಾಗಿ ಥಿಯೇಟರಿನಲ್ಲಿದ್ದ ಹುಡುಗನೊಬ್ಬ "ಯಾಕಂದ್ರೆ ನೀನು ಗಂಡಸಲ್ಲ ಕಣೋ!" ಎಂದು ಕೂಗಿದ. ನಾಯಕನ ನಿರೂಪಣೆಯಲ್ಲಿರುವ ಇಡೀ ಸಿನೆಮಾಗೆ ಈ ಒಂದು ಪ್ರತಿಕ್ರಿಯೆಯೇ ಶಕ್ತಿಶಾಲಿ ರೀಡಿಂಗ್ ಒದಗಿಸಬಲ್ಲದು.

ಪಂಚರಂಗಿಯಲ್ಲಿ ಮದುವೆಯ ಬ್ರೋಕರ್ ಆದ ರಾಜು ತಾಳಿಕೋಟೆ "ಗಂಡು ಹೆಣ್ಣು, ಪಸೀನ ಪಸೀನ ಆಗಬೇಕು, ಮಕ್ಕಳು ಹುಟ್ಟಬೇಕು" ಎನ್ನುವುದು, ಲೈಫು ಇಷ್ಟೇನೆ ಸಿನೆಮಾದಲ್ಲಿ ಅದೇ ರಾಜು ತಾಳಿಕೋಟೆ ಪ್ರಾಯದ ಹುಡುಗೀರ ಹಾಸ್ಟೆಲಿನ ವಾಚ್ ಮನ್ ಆಗಿದ್ದು "ನಾವು ಹುಟ್ಟಿರೋದೆ ಇನ್ನೊಬ್ಬರನ್ನು ಹುಟ್ಟಿಸುವುದಕ್ಕೆ" ಎನ್ನುವುದು ಎಲ್ಲ ಕಾಕತಾಳೀಯವೇನೆಲ್ಲ. ತೀವ್ರವಾದ ಎಚ್ಚರದಿಂದ ಅಳವಡಿಸಿರುವ ಥೀಮ್ ಗಳು.

೮. ಕಡೆಯದಾಗಿ ಈ ಸಿನೆಮ ಪಂಚರಂಗಿಯ ವಿಸ್ತರಣೆಯಾಗಿ, ಅದಕ್ಕಿಂತಲೂ ಸ್ಪಷ್ಟವಾಗಿ ಇರುವುದಕ್ಕೆ ಕಾರಣದ ಅಂಶವೊಂದಿದೆ. ಈ ಸಿನೆಮಾ ಆಧುನಿಕ ಗಂಡಿನ virginity consciousness (ಕನ್ಯತ್ವ ಪ್ರಜ್ಞೆ ಎನ್ನಲಿಕ್ಕೆ ಸಾಧ್ಯವೇ?) ಗುರುತಿಸಿದ ಹಾಗೂ ಅದನ್ನು ಕುರಿತು ಮಾತಾಡಿದ ಮೊಟ್ಟ ಮೊದಲ ಕನ್ನಡ ಸಿನೆಮ ಆಗಿದೆ. ಸಿನೆಮಗಳಲ್ಲಿನ ಪ್ರೇಮ ಕಥಾನಕದ ದಿಕ್ಕನ್ನು ಬದಲಿಸುವಷ್ಟು ಸಮರ್ಥವಾದುದಾಗಿದೆ. ಆರು ಪ್ರೇಮ ಪ್ರಕರಣಗಳನ್ನು ಅನುಭವಿಸಿದ ನಾಯಕ ಏಳನೆಯ ಹುಡುಗಿಯ ಸಮ್ಮುಖದಲ್ಲಿ ತನಗೆ ಎಲ್ಲವೂ ಸೆಕೆಂಡ್ ಹ್ಯಾಂಡ್ ಆಗಿ ಕಾಣುತ್ತಿರುವುದು, ಪ್ರೀತಿ ಫ್ರೆಶ್ ಅನ್ನಿಸದೇ ಇರುವುದು, ಹಳೆಯ ನೆನಪುಗಳು ಹೊಸ ಅನುಭವದ ಸಂವೇದನೆಯನ್ನು ಮಂಕಾಗಿಸುವುದನ್ನು ಗ್ರಹಿಸುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ ಪರಿಶುದ್ಧವಾಗಿರಬೇಕೆಂಬ ಅಪೇಕ್ಷೆಯ ಬಂಧವನ್ನು ಹೆಣ್ಣಿನ ಮೇಲಿಂದ ಸಡಿಲ ಗೊಳಿಸುತ್ತ ಆಧುನಿಕ ಗಂಡು ತನ್ನ ಮೇಲೆ ಹೇರಿಕೊಳ್ಳುತ್ತಿದ್ದಾನೆಯೇ? ತಾನೂ ಶುದ್ಧನಾಗಿರಬೇಕೆಂಬ ಪ್ರಜ್ಞೆ ಮೂಡಿದ ಹೊಸ ಗಂಡನ್ನು ವ್ಯಾಖ್ಯಾನಿಸುವ, ಮುಟ್ಟುವ, ಮಾತಾಡಿಸುವ ಕಥಾನಕಗಳು ಹುಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆಯೇ?ಲೈಫು ಇಷ್ಟೇನೆ ಸಿನೆಮಾವಂತೂ ಪ್ರಶ್ನೆಗಳನ್ನು ಸ್ಪಷ್ಟವಾಗಿ ಎತ್ತುತ್ತದೆ.

ಅಚ್ಚರಿಯೆಂದರೆ ಪಂಚರಂಗಿ ಹಾಗೂ ಲೈಫು ಇಷ್ಟೇನೆ ಸಿನೆಮಗಳೆರಡರಲ್ಲ್ಲೂ ಗೊಂದಲದಲ್ಲಿ ಬೀಳುವುದು, ಚಂಚಲರಾಗುವುದು, ಅಪ್ರಬುದ್ಧವಾದ ಜೀವನ ದೃಷ್ಟಿಯನ್ನು ಹೊಂದಿರುವುದು ಗಂಡು! ಪ್ರಬುದ್ಧವಾಗಿ ಯೋಚಿಸುವುದು (ನೀನು ಸುಮ್ಮನೆ ಎಲ್ಲವನ್ನು ಅನಲೈಸ್ ಮಾಡಬೇಡ ಎನ್ನುವ ಲೈಫು ಇಷ್ಟೇನೆ ನಾಯಕಿ) , ಮಾರ್ಗದರ್ಶನ ಮಾಡಲು ಮುಂದಾಗುವುದು ( ಬಾ ಬದುಕುವ ದಾರಿ ತೋರಿಸ್ತ್ತೇನೆ ಎನ್ನುವ ಪಂಚರಂಗಿ ನಾಯಕಿ), ಗಟ್ಟಿ ಹೆಗಲು ನೀಡುವುದು ಹೆಣ್ಣು! ಆಧುನಿಕ ದಾಂಪತ್ಯದಲ್ಲಿನ role reversal ಸೂಚನೆಯೇ ಇದು?