Thursday, December 23, 2010

ಪಾಡ್ ಕಾಸ್ಟ್: ರಾಮ್ ಗೋಪಾಲ್ ವರ್ಮಾ ರಕ್ತಚರಿತಾ ಹಾಗೂ ಬಂಡಿಟ್ ಕ್ವೀನ್!

ನಾವು ಸಿನೆಮಾ ನಿರ್ಮಿಸುವುದರ ಜೊತೆಗೆ, ನಿರ್ಮಾಣದ ಪ್ರಕ್ರಿಯೆಯನ್ನು ಸಹ ಹಂತ ಹಂತವಾಗಿ ದಾಖಲಿಸುತ್ತಾ ಹೋಗುವ ನಿರ್ಧಾರವನ್ನು ಯೋಜನೆಗೆ ತೊಡಗುವ ಮೊದಲು ಮಾಡಿಕೊಂಡಿದ್ದೆವು. ಸಿನೆಮ ತನ್ನ ಕಥಾವಸ್ತು, ಶೈಲಿ ಮೊದಲಾದ ತಾಂತ್ರಿಕ ವಿವರಗಳ ಜೊತೆಗೆ ತಾನು ನಿರ್ಮಾಣಗೊಳ್ಳಲು ಆಶ್ರಯಿಸುವ ಆರ್ಥಿಕತೆ, ವೃತ್ತಿಪರತೆಯ ಮಾದರಿ ಇವೆಲ್ಲವೂ ಮುಖ್ಯವಾಗುತ್ತವೆ ಎನ್ನುವ ಅರಿವಿನಿಂದ ನಾವು ಚಿತ್ರಕತೆ ತಯಾರಾಗುವ ಮುಂಚಿನಿಂದಲೇ ನಮ್ಮ ಚಟುವಟಿಕೆಗಳನ್ನು ದಾಖಲಿಸುವ ಉದ್ದೇಶದಿಂದ ‘ಭೂತಗನ್ನಡಿ’ ಬ್ಲಾಗ್ ತೆರೆದದ್ದು.


ಈ ನಿಟ್ಟಿನಲ್ಲಿ ಈಗಾಗಲೇ ನಾವು ನಮ್ಮ ತಂಡದ ಸದಸ್ಯರ ಪರಿಚಯ, ನಾವು ನಡೆಸಿದ ಭೇಟಿಗಳ ಕುರಿತ ಮಾಹಿತಿ. ನಮ್ಮ ಕೆಲಸದ ದಿಕ್ಕು ದೆಸೆ ಬಗ್ಗೆ ಬರೆದಿದ್ದೇವೆ.


ಈ ಪೋಸ್ಟಿನಿಂದ ನಮ್ಮ ಚರ್ಚೆಯ ಆಡಿಯೋ ಕ್ಲಿಪ್ಪಿಂಗುಗಳನ್ನು ಪಾಡ್ ಕಾಸ್ಟ್ ಮಾಡುತ್ತಿದ್ದೇವೆ. ಪಾಡ್ ಕಾಸ್ಟ್ ಸರಣಿಯ ಮೊದಲ ಭಾಗ ಇಲ್ಲಿದೆ:

(ಮಾತುಕತೆಯಲ್ಲಿ ಭಾಗಿಯಾದವರು:

ಶೇಖರ್ ಪೂರ್ಣ

ಸುಪ್ರೀತ್.ಕೆ.ಎಸ್

ಕಿರಣ್.ಎಂ

ಧ್ವನಿ ಮುದ್ರಣ, ಸಂಸ್ಕರಣೆ: ಸುಪ್ರೀತ್.ಕೆ.ಎಸ್)



Get this widget | Track details | eSnips Social DNA

Tuesday, December 14, 2010

ಹಳೆಯದೊಂದು ಸಿನೆಮಾ ಸ್ಕ್ರಿಪ್ಟ್

ಸಿನೆಮಾ ನಿರ್ಮಾಣದ ಪ್ರಕ್ರಿಯೆಯಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳಾದುದರಿಂದ ಹಲವು ಹಂತಗಳಲ್ಲಿನ ಕೆಲಸವನ್ನು ನಾವು ಅಭ್ಯಾಸ ಎಂದು ಪರಿಗಣಿಸಿ ಪೂರೈಸಬೇಕಾಗುತ್ತದೆ. ಪೂರ್ಣ ಪ್ರಮಾಣದ ಚಿತ್ರಕತೆಯೊಂದನ್ನು ಪೂರೈಸಿ ಅದನ್ನು ತಾತ್ವಿಕ ಅಂತ್ಯದವರೆಗೆ ಕೊಂಡೊಯ್ದು ದೃಶ್ಯಗಳಾಗಿ ವಿಂಗಡಿಸಿ ಸಿದ್ಧಪಡಿಸಿದ ಸ್ಕ್ರಿಪ್ಟು ನಮ್ಮನ್ನು ಚಿತ್ರಕತೆ ಬರೆಯುವುದರಲ್ಲಿ ತರಬೇತುಗೊಳಿಸಿತೇ ವಿನಃ ಬದಲಾದ ನಮ್ಮ ಮನಸ್ಥಿತಿಗೆ ಹೊಂದದೆ ಅದನ್ನು ಕೈಬಿಡಬೇಕಾಯ್ತು.


ಸಿನೆಮಾ ನಿರ್ಮಾಣದ ಜೊತೆಗೆ ನಿರ್ಮಾಣದ ಪ್ರಕ್ರಿಯೆಯ ಕುರಿತೂ ದಾಖಲಿಸುತ್ತಾ ಹೋಗಬೇಕು ಎನ್ನುವ ಇರಾದೆ ಭೂತಗನ್ನಡಿಯದು. ಹೀಗಾಗಿ ಈ ಹಳೆಯ ಸ್ಕ್ರಿಪ್ಟನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಈ ಸ್ಕ್ರಿಪ್ಟ್ ಬರೆದವರು: ಸುಪ್ರೀತ್.ಕೆ.ಎಸ್


ದೃಶ್ಯ ೧:


ಹಗಲು

ಕಾಡು

ಪೊಲೀಸ್ ಮಾಹಿತಿದಾರ

ಗನ್ ಫೈರ್ ಆದ ಸದ್ದು ಕೇಳುತ್ತೆ - ಮಾಹಿತಿದಾರ ಶವವನ್ನು ಕಂಡು ಎಸ್ ಐಗೆ ಫೋನ್ ಮಾಡಿ ಮಾಹಿತಿ ತಿಳಿಸ್ತಾನೆ


ದೃಶ್ಯ :

ಹಗಲು

ಮನೆಯೊಳಗೆ

ಎಸ್ ಐ, ಹೆಂಡತಿ

ಮೇಲಧಿಕಾರಿಗಳಿಗೆ ಫೋನ್ ಮಾಡಿ ಸಮಾಲೋಚನೆ ನಡೆಸುತ್ತಾನೆ, ನಕ್ಸಲ್ ಸಾವನ್ನು ಎನ್ ಕೌಂಟರ್ ಎಂದು ಬಿಂಬಿಸುವುದಕ್ಕೆ instructions ಸಿಕ್ಕುತ್ತವೆ


ದೃಶ್ಯ

ಹಗಲು

ಪೊಲೀಸ್ ಸ್ಟೇಷನ್

ಎಸ್ ಐ

ಪೇದೆಗಳು

ಅದಾಗಲೇ ಸತ್ತಿರುವ ನಕ್ಸಲ್ ನಾಯಕಿ ಕಾಡಿನಲ್ಲಿ ಓಡಾಡಿಕೊಂಡಿರುವ ಮಾಹಿತಿ ಸಿಕ್ಕಂತೆ ನಟಿಸಿ ಶೂಟರ್ ಗಳನ್ನ ಹೊರಡಿಸಿಕೊಂಡು ಹೋಗ್ತಾನೆ


ದೃಶ್ಯ

ಹಗಲು

ಕಾಡು

ಎಸ್ ಐ, ಶೂಟರ್, ಮಾಹಿತಿ ದಾರ

ಗುಂಡಿನ ಚಕಮಕಿಯಾದ ಸದ್ದು - ಎನ್ ಕೌಂಟರ್ ನಡೆದಂತೆ ಸಾಕ್ಷ್ಯಗಳ ಸ್ಥಾಪನೆ ನಡೆಯುತ್ತೆ


ದೃಶ್ಯ

ಹಗಲು

ಪೊಲೀಸ್ ಸ್ಟೇಷನ್ ಆವರಣ

ಮಾಧ್ಯಮದವರು

ಎನ್ ಕೌಂಟರ್ ಹೇಗಾಯಿತೆಂಬುದಕ್ಕೆ ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡುತ್ತಾನೆ- ಕುಖ್ಯಾತ ನಕ್ಸಲ್ ನಾಯಕಿಯ ಎನ್ ಕೌಂಟರ್ ಎಂದು ಟಿವಿ ಚಾನೆಲ್ ಗಳು ವರದಿ ಮಾಡುತ್ತವೆ


ದೃಶ್ಯ

ಹಗಲು

ಮನೆಯೊಳಗೆ

ಜರ್ನಲಿಸ್ಟ್

ಟಿವಿಯಲ್ಲಿ ಬಿತ್ತರವಾದ ವರದಿಯಲ್ಲಿ ಶುಭಾ ಎನ್ ಕೌಂಟರ್, ಹಿನ್ನೆಲ ಹಾಗೂ ರಾಜಕೀಯ ವಿದ್ಯಮಾನಗಳನ್ನು ಗಮನಿಸ್ತಾಳೆ- ಹೆಚ್ಚಿನದನ್ನ ತಿಳಿಯೋದಕ್ಕೆ ನಿಶ್ಚಿತಾರ್ಥವಾದ ಲೆಕ್ಚರರ್ ಗೆ ಫೋನ್ ಮಾಡ್ತಾಳೆ- ಪೊಲೀಸರು ಕೊಲ್ಡ್ ಬ್ಲಡೆಡ್ ಆಗಿ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕುತ್ತೆ- ವರದಿಗಾಗಿ ತಾನು ಭೇಟಿ ನೀಡಬಹುದು ಎನ್ನುತ್ತಾಳೆ


ದೃಶ್ಯ ೭


ಹಗಲು

ಆಫೀಸ್ ಕೊಠಡಿ

ಜರ್ನಲಿಸ್ಟ್, ಬಾಸ್

ಶುಭಾ ಸ್ಟೋರಿಯಲ್ಲಿರುವ ಮಾನವೀಯ ಅಂಶಗಳನ್ನು ಎಕ್ಸ್ ಪ್ಲಾಯ್ಟ್ ಮಾಡುವುದು ಹೇಗೆಂದು ಬಾಸ್ ವಿವರಿಸುತ್ತಾನೆ- ಹಿಂದಿನ ಓಡಾಟಗಳಲ್ಲಿ ಲೆಕ್ಚರ್ ಹೇಳಿದ ಕತೆಗಳಿಂದ ಶುಭಾ ಇಂಟರೆಸ್ಟಿಂಗ್ ಪಾತ್ರವಾಗಿ ಜರ್ನಲಿಸ್ಟಿಗೆ ಕಾಣುತ್ತಾಳೆ


ದೃಶ್ಯ

ರಾತ್ರಿ

ಪೊಲೀಸ್ ಸ್ಟೇಷನ್

ಜರ್ನಲಿಸ್ಟ್, ಎಸ್ ಐ, ಕೆಮರಾಮನ್

ತನ್ನ ಭೇಟಿ ಉದ್ದೇಶ ತಿಳಿಸಿ ವರದಿಗಾರಿಕೆಗಾಗಿ ಎಲ್ಲೆಲ್ಲಿ ತಾನು ಹೋಗುತ್ತಿದ್ದೇನೆಂದು ಪೊಲೀಸರಿಗೆ ತಿಳಿಸುತ್ತಾಳೆ- ಲೆಕ್ಚರ್ ಜೊತೆ ನಿಶ್ಚಿತಾರ್ಥವಾಗಿರುವ ರಿಪೋರ್ಟರ್ ಕುರಿತು ಎಸ್ ಐ ಅಸಹನೆ ವ್ಯಕ್ತ ಪಡಿಸುತ್ತಾನೆ


ದೃಶ್ಯ

ರಾತ್ರಿ

ಮನೆಯ ಆವರಣ

ಜರ್ನಲಿಸ್ಟ್, ಲೆಕ್ಚರರ್

ವಯಕ್ತಿಕ ವಿಚಾರಗಳನ್ನು ಮಾತಾಡಿಕೊಳ್ಳುತ್ತಾರೆ- ಶುಭಾಳ ಪ್ರಸ್ತಾಪದಿಂದ ಸಣ್ಣಗೆ ಚರ್ಚೆ ಶುರುವಾಗುತ್ತೆ- ಲೆಕ್ಚರ್ ಮಾತುಗಳಿಂದ ಪ್ರಭಾವಿತಳಾದ ಜರ್ನಲಿಸ್ಟ್ ತನ್ನ ವರದಿಯ ರೂಪು ರೇಖೆ ಹೇಗಿರಬೇಕೆಂದು ನಿರ್ಧರಿಸುತ್ತಾಳೆ


ದೃಶ್ಯ ೧೦

ಹಗಲು

ಮನೆಯ ಆವರಣ

ಜರ್ನಲಿಸ್ಟ್, ಕೆಮರಾಮನ್, ಶುಭಾಳ ತಂದೆ

ಮಗಳ ಸಾವಿನ ಬಗ್ಗೆ ತಂದೆ ಏನನ್ನುತ್ತಾನೆ ಎಂದು ವರದಿ ಮಾಡುತ್ತಾಳೆ


ದೃಶ್ಯ ೧೧

ಹಗಲು

ಕಾಲೇಜು ಆವರಣ

ಲೆಕ್ಚರ್, ಮಾನವ ಹಕ್ಕುಗಳ ಹೋರಾಟಗಾರರು

ಶುಭಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುತ್ತೆ- ಅಲ್ಲಿನ ವರದಿ- ಲೆಕ್ಚರರ್ ಶುಭಾ ಬಗ್ಗೆ ಮಾತನಾಡುತ್ತಾನೆ - ಪೋಸ್ಟ್ ಮಾರ್ಟಂ ಬೆಂಗಳೂರಲ್ಲಿ ಆಗಬೇಕೆಂದು ಆಗ್ರಹಿಸುತ್ತಾರೆ


ದೃಶ್ಯ ೧೨

ಹಗಲು

ಹೊರಗೆ

ಜರ್ನಲಿಸ್ಟ್, ಲೆಕ್ಚರ್

ಮದುವೆಯಾಗಲಿರುವ ಜೋಡಿ ಪಿಕ್ನಿಕ್ ಎಂದು ಒಂದು ಜಾಗಕ್ಕೆ ಹೋಗಿರ್ತಾರೆ- ಕಾಡುಗಳಲ್ಲಿ ನಡೆದಾಡುತ್ತ ಲೆಕ್ಚರ್ ನಕ್ಸಲ್ ಬದುಕು ಹೇಗಿರುತ್ತದೆಂಬುದನ್ನು ವಿವರಿಸ್ತಾನೆ


ದೃಶ್ಯ ೧೩

ಹಗಲು

ಮನೆಯೊಳಗೆ

ಜರ್ನಲಿಸ್ಟ್,ಲೆಕ್ಚರ್,ಲೆಕ್ಚರ್ ತಂದೆ

ವಾರ ಕಳೆದ ನಂತರ ಅರ್ಚಕನ ಕುಟುಂಬದಲ್ಲಿ ಕೋಲ ನಡೆಸಲು ತೀರ್ಮಾನಿಸಿರುವ ವಿಷಯ ಲೆಕ್ಚರ್ ತಂದೆ ತಿಳಿಸ್ತಾನೆ. ಅಮೇರಿಕಾದಲ್ಲಿದ್ದ ಅರ್ಚಕನ ಮಗಳು ಹಿಂದಿನ ರಾತ್ರಿ ಬಂದಿರುವುದಾಗಿ ತಿಳಿಯುತ್ತೆ - ಕೋಲದ ಉದ್ದೇಶದ ಚರ್ಚೆಯಾಗುತ್ತೆ- ನಕ್ಸಲ್ ನಾಯಕಿಯ ಮೋಹಕ್ಕೊಳಗಾಗಿ ಕಾಡು ಸೇರಿದ್ದ ಮಗನಿಗೆ ಆಕೆಯ ಮೋಹ ಬಿಟ್ಟರೆ ಕೋಲ ಎನ್ನುವ ಹರಕೆಯಿದ್ದಿರಬಹುದು ಎನ್ನುವ ಮಾತು ಹಳ್ಳಿಯಲ್ಲಿ ಓಡಾಡುತ್ತಿದೆ ಎನ್ನುವುದು ತಿಳಿಯುತ್ತೆ-


ದೃಶ್ಯ ೧೪

ಹಗಲು

ಮನೆ ಹೊರಗೆ

ಜರ್ನಲಿ, ಲೆಕ್ಚರ್

ಕೋಲವನ್ನು ನೋಡಬೇಕೆಂದು- ಚಿತ್ರೀಕರಿಸಿಕೊಳ್ಳಬೇಕೆಂದು ಕೆಮರಾಮನ್ ಜೊತೆ ವಾಣಿ (ಜರ್ನಲಿಸ್ಟ್) ಮಾತನಾಡಿಕೊಂಡು- ಕೋಲದ ಬಗ್ಗೆ ಮಾತನಾಡುತ್ತಾ ಆತ ಕೋಲ್ಡ್ ರೀಡಿಂಗ್ ಇರಬಹುದು ಅನ್ನುವನು - ವಾಣಿ ನಮ್ಮದಷ್ಟಕ್ಕೆ ಸೀಮಿತವಲ್ಲ ಎಂದು ವಿದೇಶದಲ್ಲಿ ಜನಪ್ರಿಯವಾದ ಮೀಡಿಯಮ್ ಟಾಕ್ ಬಗ್ಗೆ ಹೇಳುವಳು


ದೃಶ್ಯ ೧೬

ಹಗಲು

ಮನೆಯ ಹೊರಗೆ

ವಾಣಿ, ಆನಂದ್, ಕೆಮರಾ ಮನ್

ಆನಂದನ ಸ್ಟೂಡೆಂಟ್ ಆಗಿದ್ದ ಶುಭಾ- ನಕ್ಸಲ್ ಆದ ಮೇಲೆ- ಆಕೆಯ ಜ್ಯೂನಿಯರ್ ಹಾಗೂ ಅಭಿಮಾನಿ ಜಗದೀಶ್ ಅಬ್ಸ್ಕಾಂಡ್ ಆದ ಅವರಿಬ್ಬರೂ ಮದುವೆಯಾಗಿದ್ದಿರಬಹುದು ಎಂದು ಪೊಲೀಸರು ಹೇಳಿದ್ದು- ಒಳ್ಳೇ ಡೈಮೆನ್ಷನ್ ಸಿಕ್ಕಬಹುದು ಅಂತ - ಆಗ ಅವರಿಬ್ಬರು ಗಂಡ ಹೆಂಡತಿಯೇ ಆಗಿರಬೇಕೆಂಬ ಕಂಡೀಷನ್ ಏನಕ್ಕೆ?


ದೃಶ್ಯ ೧೫

ಹಗಲು

ಮನೆಯೊಳಗೆ

ಅರ್ಚಕ, ಮಗಳು,ಮಗ,ಅಜ್ಜಿ

ಪ್ರಯಾಣದ ಬಗ್ಗೆ ಮಗಳ ಜೊತೆ ಮಾತು- ಕೋಲದ ವ್ಯವಸ್ಥೆ ಬಗ್ಗೆ ಮಗನೊಂದಿಗೆ ಚರ್ಚೆ- ಪೀಡೆ ತೊಲಗಿತೆಂಬ - ಅಣ್ಣ ಮನೆಗೆ ವಾಪಸ್ಸಾಗಬಹುದು ಎನ್ನುವ ಉತ್ಸಾಹ ಮಗಳದು- ಅಜ್ಜಿ ಆತ ಓದಿ ಹಾಳಾಗಿದ್ದು ಎನ್ನುವಳು - ಕೋಲ ನಡೆಸಲು ಅವರಿಗೆ ನಿಜವಾದ ಕಾರಣ ಸ್ಪಷ್ಟವಾಗುತ್ತೆ


ದೃಶ್ಯ ೧೬

ಸಂಜೆ

ಮನೆಯ ಹಿತ್ತಲು, ಕೋಲದ ಪಾತ್ರಿ, ಊರಿನ ಜನ

ಕೋಲದ ತಯಾರಿ- ಪಾಡ್ದನ- ಉನ್ಮಾದಕ್ಕಾಗಿ ಕುಣಿತ - ನಿಮ್ಮ ಮಗನು ಮೋಹದಿಂದ ಹೊರ ಬಂದಿದಾನೆ ಎನ್ನುವ ಪಾತ್ರಿ- ನಾನಾ ಹೇಳಿಕೆಗಳನ್ನು ನೀಡಿದ ನಂತರ - ಲೆಕ್ಚರ್ ಬಳಿ ಬಂದು ಬ್ರಾಹ್ಮಣ ಶಿಶುವನ್ನು ಕೊಂದ ದೋಷವಿರುವುದಾಗಿ ಹೇಳಿ ಪರಿಹಾರ


ದೃಶ್ಯ ೧೭

ರಾತ್ರಿ

ಮನೆಯೊಳಗೆ

ವಾಣಿ,ಆನಂದ್ (ಲೆಕ್ಚರ್)

ಕೋಲದಲ್ಲಿ ತಿಳಿದ ವಿಷಯದ ಬಗ್ಗೆ ವಾಣಿ ಪ್ರಶ್ನಿಸಿ ಜಗಳವೆಬ್ಬಿಸುತ್ತಾಳೆ- ಲೆಕ್ಚರ್ ನಿಗೆ ಅಕ್ರಮ ಸಂಬಂಧವಿರಬಹುದು - ತನಗೆ ಮೋಸ ಮಾಡಿದ್ದಾನೆಂದು ಆಕೆಯಲ್ಲಿ ಸಂಶಯ ಮೂಡುತ್ತೆ


ದೃಶ್ಯ ೧೮

ಗಲು

ಮನೆಯೊಳಗೆ

ವಾಣಿ,

ಲ್ಯಾಪ್ ಟಾಪಿನಲ್ಲಿ ಮೇಲ್ ಚೆಕ್ ಮಾಡುತ್ತಿರುತ್ತಾಳೆ - ನಕ್ಸಲ್ ಸಂಘಟನೆಯಿಂದ ಇ ಮೇಲ್ ಬಂದಿರುತ್ತೆ- ಅದರಲ್ಲಿ ಶುಭಾಳನ್ನ ಹುತಾತ್ಮ ನಾಯಕಿಯಾಗಿ - ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ- ದೈಹಿಕವಾಗಿ ಬಳಸಲ್ಪಟ್ಟು- ಬರ್ಬರವಾಗಿ ಕೊಲೆಯಾಗಿರುವಳು ಎನ್ನುವುದಾಗಿ ವಿವರಿಸಿರುತ್ತಾರೆ- ಬೆಂಗಳೂರಿನಲ್ಲಿ ಅಟೋಪ್ಸಿಯಾದರೆ ಸತ್ಯ ಬಯಲಾಗುತ್ತೆ


ದೃಶ್ಯ ೧೯

ಹಗಲು

ದೇವಸ್ಥಾನ

ವಾಣಿ,ಅರ್ಚಕ,ಅರ್ಚಕನ ಮಗಳು


ತಮ್ಮ ಮಗನಿಗೂ ಶುಭಾಳಿಗೂ ಇದ್ದ ಸಂಬಂಧದ ಬಗ್ಗೆ ಮಾತು ಕತೆಯಾಗುತ್ತೆ. ಸೌಂದರ್ಯವತಿಯಾಗಿದ್ದ ಶುಭಾ ಸಾಕಷ್ಟು ಮಂದಿಯನ್ನು ಮರಳು ಮಾಡಿದ್ದಳು. ಆಕೆಯ ಶೀಲದ ಬಗ್ಗೆ ಅರ್ಚಕನ ಮಗಳು ಸಂಶಯ ವ್ಯಕ್ತ ಪಡಿಸ್ತಾಳೆ. ಕಾಲೇಜು ದಿನಗಳಲ್ಲೂ ಹೋರಾಟ ಅಂತ ಹಳ್ಳಿಗಳಲ್ಲಿ ತಿರುಗುತ್ತಿದ್ದಳು. ಎಲ್ಲೆಲ್ಲೋ ಮಲಗುತ್ತಿದ್ದಳು. ಲೆಕ್ಚರ್ ಆನಂದನಿಗೂ ಮೋಡಿ ಹಾಕಿದ್ದಳು. ಎನ್ನುವಳು


ದೃಶ್ಯ ೨೦

ರಾತ್ರಿ

ಲೆಕ್ಚರ್ ಕಾಲೇಜು ರೂಮಿನೊಳಗೆ

ವಾಣಿ,ಆನಂದ್,ಕೆಮರಾ ಮನ್


ನಕ್ಸಲ್ ಜಗದೀಶ್ ಹಾಗೂ ಶುಭಾ ಸಂಬಂಧ ಮೊದಲಾದವುಗಳ ಕುರಿತು ಒಂದು ಬೈಟ್ ಪಡೆಯುವುದಕ್ಕೆ ಆತನ ಕೋಣೆಗೆ ಬರ್ತಾಳೆ. ಆತನ ಕಸದ ಬುಟ್ಟಿಯಲ್ಲಿ ಕಾಗದ ಕಾಣುತ್ತೆ. ಆಜಾದ್ ಎಂಬ ಹೆಸರಿರುವ ಪತ್ರ. ಆಕೆಯ ಸಾವಿಗೆ ನೀನೇ ಕಾರಣ ಎಂದು ಇರುತ್ತೆ. ಬೈಟ್ ಆದ ನಂತರ ಕ್ಯಾಮರಾ ಮನ್ ಹೊರಟು ಹೋಗ್ತಾನೆ


ದೃಶ್ಯ ೨೧

ರಾತ್ರಿ

ಮನೆಯೊಳಗೆ

ವಾಣಿ

ಮೆಸೇಜ್ ಬರುತ್ತೆ ಕೆಮರಾಮನ್ ನಿಂದ. ಟಿವಿ ಹಾಕುತ್ತಾಳೆ. ಪ್ರತಿಸ್ಪರ್ಧಿ ಟಿವಿ ಚಾನೆಲ್ಲಿನಲ್ಲಿ ವರದಿ ಪ್ರಕಟವಾಗ್ತಿರುತ್ತೆ. ಶುಭಾ ಸತ್ತಾಗ ಪ್ರಗ್ನೆಂಟ್ ಆಗಿದ್ದಳು ಎಂದು. ಚರ್ಚೆ ನಡೆಯುತ್ತೆ, ನಕ್ಸಲರಲ್ಲಿ ಯಾರಾದರೂ ಅಪ್ಪ ಆಗಿರಬಹುದು ಎಂದು. ಜಗದೀಶ ಆಕೆ ಮದುವೆಯಾಗಿದ್ದರು ಎನ್ನುವ ಅಂಶವೂ ಚರ್ಚಿತವಾಗುತ್ತೆ,

ಬಾಸ್ ನಿಂದ ಫೋನ್... ಜಗದೀಶ್ ಪ್ರತಿಕ್ರಿಯೆ ಸಿಕ್ಕರೆ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತೆ ಅಂತಾನೆ

ವಾಣಿ ಆನಂದನಿಗೆ ಜಗದೀಶನನ್ನು ಮೀಟ್ ಮಾಡೋಕೆ ಆಗುತ್ತ ಅಂತ ಕೇಳ್ತಾಳೆ. ಆತ ಅವಾಯ್ಡ್ ಮಾಡೋಕೆ ಟ್ರೈ ಮಾಡ್ತಾನೆ. ಆಕೆ ಪಟ್ಟು ಹಿಡಿದು ಕೇಳಿದಾಗ ಒಲ್ಲದ ಮನಸ್ಸಿನಿಂದ ಒಪ್ತಾನೆ.


ದೃಶ್ಯ ೨೨

ಹಗಲು

ಕಾಡಿನಲ್ಲಿ

ವಾಣಿ, ಆನಂದ್,ಜಗದೀಶ

ಮಾಧ್ಯಮಕ್ಕೆ ಹೇಳಿಕೆ ಎಂದು ನೀಡುವಾಗ ಜಗದೀಶ- ಜೊತೆಗಿದ್ದವರು- ಪೊಲೀಸರು ಆಕೆಯನ್ನು ಬಂಧಿಸಿಟ್ಟಿದ್ದರು- ಆಕೆಯನ್ನು ದೈಹಿಕವಾಗಿ ಬಳಸಿಕೊಂಡರು- ಅತ್ಯಾಚಾರದಿಂದಾಗಿ ಹುಟ್ಟಿದ ಮಗು- ಕಡೆಗೆ ಆಕೆಯನ್ನು ಗುಂಡಿಟ್ಟು ಕೊಂದು ಕಾಡಿನಲ್ಲಿ ಬಿಸಾಕಿದರು ಎನ್ನುವನು. ಪ್ರತೀಕಾರ ತೀರಿಸಿಕೊಳ್ಳುತ್ತದೆ ತಮ್ಮ ತಂಡ ಎನ್ನುವರು

ಜಗದೀಶನ ಜೊತೆ ತಿರುಗುತ್ತ ಮಾತನಾಡುವಾಗ ಆತನ ನೋಟ್ ಪುಸ್ತಕ ಓದ್ತಾಳೆ- ಆತನ ಹ್ಯಾಂಡ್ ರೈಟಿಂಗ್ ಪರಿಚಯ ಸಿಕ್ಕುತ್ತೆ ಆನಂದನಿಗೆ

ಪುಸ್ತಕ ಹಿಂದಿರುಗಿಸುವಾಗ ಶುಭಾಳ ಫೋಟೊ ಕೆಳಕ್ಕೆ ಬೀಳುತ್ತೆ - ಅದನ್ನು ಎತ್ತಿ ಜಗದೀಶನಿಗೆ ಕೊಡ್ತಾಳೆ- ಆತನ ಕಣ್ಣಲ್ಲಿ ನೀರಿರುತ್ತೆ


ದೃಶ್ಯ ೨೩

ಹಗಲು

ಕಾರಿನೊಳಗೆ ಹಿಂದಿರುಗುವಾಗ

ವಾಣಿ,ಆನಂದ್

ಆಕೆಯ ಮಗುವಿನ ತಂದೆ ಯಾರು ಎನ್ನುವ ಬಗ್ಗೆ ಚರ್ಚೆಯಾಗುತ್ತೆ. ಆಕೆಗೆ ಆದ ಅನ್ಯಾಯ ದೊಡ್ಡದು ಎಂದು ಈಕೆ ವಾದಿಸುತ್ತಾಳೆ. ಈತ ಆಕೆಯ ತಂದೆಯ ಹುಡುಕಾಟಕ್ಕೆ ಅರ್ಥವಿಲ್ಲ. ಆಕೆಯ ಸಾವನ್ನು ಬಳಸಿ ಸಿಂಪಥಿ ಗಿಟ್ಟಿಸಿಕೊಳ್ಳಬಹುದೆಂದು ವಿವರಿಸುವನು. ಆತ ಸಾಮಾಜಿಕ ಹೋರಾಟದಲ್ಲಿ ಇಂತಹ ಬಲಿದಾನ ಅಗತ್ಯ ಎನ್ನುವನು.

ಪತ್ರಕರ್ತನಿಗೆ ಸಾಮಾಜಿಕ ಕಾಳಜಿ ಮುಖ್ಯ ಎಂದು ತಿಳಿ ಹೇಳ್ತಾನೆ.


ದೃಶ್ಯ ೨೪

ರಾತ್ರಿ

ಮನೆಯೊಳಗೆ

ವಾಣಿ


ಬಾಸ್ ಜೊತೆ ಚಾಟ್ - ಆಕೆಯ ಮೇಲೆ ಅತ್ಯಾಚಾರವಾಗಿತ್ತು ಅದನ್ನ ಪರ್ಸನಲ್ ಸ್ಟೋರಿಯಾಗಿ ಮಾಡಬೇಕು. - ಬಾಸ್ ಹೇಳುತ್ತಾನೆ- ಪೋಸ್ಟ್ ಮಾರ್ಟೆಮ್ ರಿಪೋರ್ಟ್ ಅದನ್ನೇ ಆಕೆ ಗರ್ಭಿಣಿಯಾಗಿದ್ದಳೆಂದು ಹೇಳುತ್ತೆ ಅನ್ನುತ್ತಾನೆ- ಆದರೆ ಇದರಿಂದ ಪೊಲೀಸ್ ವರ್ಷನ್ ಸುಳ್ಳಾಗುತ್ತೆ- ನಕಲಿ ಎನ್ ಕೌಂಟರ್ ಎಂದಾಗುತ್ತೆ ಅಂತ- ಹೋಮ್ ಮಿನಿಸ್ಟರ್ ಕಡೆಯಿಂದ ಇನ್ಸ್ಟ್ರಕ್ಷನ್ ಬಂದಿದೆ- bury ಮಾಡ್ಬೇಕು ಅಂತ- ಸೋ ಫೈನಲ್ ಆಗಿ ರಿಪೋರ್ಟ್ ಕಳಿಸು- ಆನಂದ್ ಹೇಳಿಕೆ ರೆಕಾರ್ಡ್ ಮಾಡಿಸಿ-ವೀಕೆಂಡ್ ನಲ್ಲಿ ಕೆಮರಾಮನ್ ಕಳಿಸಿಕೊಡ್ತೀನಿ ಅಂತಾನೆ

ಕೂಡಲೇ ಆಕೆ ಬೌರಿಂಗ್ ಆಸ್ಪತ್ರೆಯ ಲೇಡಿ ಡಾಕ್ಟರ್ ಫ್ರೆಂಡ್ ಗೆ - ಈ ಮೇಲ್- ಶುಭಾಳ ಮಗು ಯಾರದೆಂದು ತಿಳಿಯಲು ಸಾಧ್ಯವಾ ಎಂದು ತಿಳಿಯುತ್ತಾಳೆ.

ಆಕೆ ಡಿ.ಎನ್.ಎ ಟೆಸ್ಟ್ ಮಾಡಬಹುದು ಅಂತಾಳೆ ಆದರೆ ಮ್ಯಾಚ್ ಮಾಡುವುದಕ್ಕೆ ಸ್ಯಾಂಪಲ್ಸ್ ಬೇಕು ಅಂತಾಳೆ

ಈಕೆ ಮಲಗುವಾಗ ಆನಂದನ ಬಾಚಣಿಕೆಯಲ್ಲಿನ ಕೂದಲು ಬಿಡಿಸಿ ಇಟ್ಟುಕೊಳ್ತಾಳೆ

ದೃಶ್ಯ ೨೫

ಹಗಲು

ಮನೆಯೊಳಗೆ

ವಾಣಿ,ಶುಭಾ ತಂದೆ


ಆಪ್ತವಾಗಿ ಮಾತಾಡಲು ಹೋಗ್ತಾಳೆ. ಮನೆಯಲ್ಲಿ ಓಡಾಡುವಾಗ ತಂದೆ ಆಕೆಯ ಬಗ್ಗೆ ಹೇಳ್ತಾನೆ. ಆಕೆ ಹಾಳಾದಳು ಅಂತ ದಯವಿಟ್ಟು ತೋರಿಸ್ಬೇಡಮ್ಮ ಅಂತ ಕೇಳ್ತಾನೆ. ಈಗ ಒಳ್ಳೆಯ ಹೆಸರು ಬಂದಿದೆ ಅವಳು ಸತ್ತು. ರಹಸ್ಯವಾಗಿಟ್ಟಿದ್ದ ಶುಭಾಳ ಪತ್ರಗಳನ್ನು ಕೊಡುತ್ತಾನೆ.

ಆಕೆಗೆ ಆನಂದನ ಮೇಲೆ ಪ್ರೀತಿ ಇದ್ದದ್ದು ತಿಳಿಯುತ್ತೆ.


ದೃಶ್ಯ ೨೬

ಸಂಜೆ

ತೋಟದಲ್ಲಿ

ವಾಣಿ,ಆನಂದ್,ಕೆಮರಾಮನ್


ಕಡೆಯ ರಿಪೋರ್ಟಿಗಾಗಿ ಬೈಟ್ ಪಡಿಯೋಕೆ ಕ್ಯಾಮರಾ ಇಡುವಾಗ ವಾಣಿಗೆ ಮೆಸೇಜ್ ಬರುತ್ತೆ. ಡಿ ಎನ್ ಎ ಮ್ಯಾಚ್ ಆಗಿದೆ ಅಂತ

ಆನಂದ ಮಾತನಾಡುತ್ತಾ ಶುಭಾಳ ಸಾವಿಗೆ ವ್ಯವಸ್ಥೆ ಹೇಗೆ ಕಾರಣ ಅಂತ ವಿವರಿಸ್ತಾನೆ.

ಸಂದರ್ಶನ ನಂತರ ತನಗೆ ಅರ್ಚಕರ ಮನೆಯಲ್ಲಿ ಕೆಲಸವಿದೆ. ಯಾವುದಕ್ಕೂ ಇರಲಿ ಶಾಂತಿ ಮಾಡಿಸು ಅಂತ ಅಪ್ಪ ಹೇಳಿದರು ಅನ್ನುತ್ತಾನೆ.

ಈಕೆ ಶೂಟಿಂಗ್ ಮುಗಿದ ನಂತರ. ಕ್ಯಾಮರಾ ಮನ್ ಗೆ ತಾನೂ ವಾಪಸ್ಸು ಬಂದು ಬಿಡುವುದಾಗಿ ಹೇಳ್ತಾಳೆ.

ದೃಶ್ಯ ೨೭

ರಾತ್ರಿ

ಮನೆಯೊಳಗೆ

ಆನಂದ್

ಮನೆಗೆ ಬಂದಾಗ ವಾಣಿ ಬೆಂಗಳೂರಿಗೆ ವಾಪಸ್ ಹೋಗಿರುವುದು ತಿಳಿಯುತ್ತೆ. ಟಿವಿ ಆನ್ ಮಾಡಿದಾಗ ವಾಣಿಯ ರಿಪೋರ್ಟ್ ಬರ್ತಿರುತ್ತೆ.

ಟಿಪಾಯ್ ಮೇಲೆ ಲಕೋಟೆಯೊಂದಿರುತ್ತೆ ಅದರಲ್ಲಿ ವಾಣಿಯ ಎಂಗೇಜ್ ಮೆಂಟ್ ರಿಂಗ್ ಇರುತ್ತೆ.

ಜೊತೆಗೆ ವಿದಾಯದ ಪತ್ರ.

Saturday, December 11, 2010

ವಾರಾಂತ್ಯದ ಭೇಟಿ 3

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿ ಒಪ್ಪಿಕೊಂಡಿದ್ದ ಕಥಾ ಹಂದರವನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಕಟ್ಟಿಕೊಡಲಿಕ್ಕೆ ತುಂಬಾ ಕಷ್ಟ ಎನ್ನುವ ಅರಿವಾಯಿತು. ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರಕತೆಯನ್ನು ಹೆಣೆಯುವುದಾಗಿ ನಾವು ಯೋಜಿಸಿಕೊಂಡಿದ್ದೆವು. ಆದರೆ ಎರಡು ಪಾತ್ರಗಳು ಇಡೀ ಕ್ಯಾನ್ವಾಸನ್ನು ಆಕ್ರಮಿಸಿಕೊಳ್ಳುವಾಗ ನಮ್ಮ ಚಿತ್ರಕತೆ ವಿಪರೀತ ನಾಟಕೀಯವಾಗಿರಬೇಕಾದ ಅನಿವಾರ್ಯತೆ ಕಾಡುತ್ತದೆ. ನಾಟಕೀಯತೆ ಅತಿಯಾದಷ್ಟು ಚಿತ್ರಕತೆ ವಾಸ್ತವದಿಂದ ದೂರ ಹೋಗುತ್ತದೆ ಹಾಗೂ ಚಿತ್ರಕತೆ ಪೇಲವವಾಗುತ್ತದೆ ಎನ್ನಿಸಿತು. ಹೀಗಾಗಿ ನಾವು ಎರಡು ಪಾತ್ರಗಳ ಕತಾ ಹಂದರವನ್ನು ಕೈಬಿಟ್ಟು ವಿಸ್ತಾರವಾದ ಕ್ಯಾನ್ವಾಸ್ ಒದಗಿಸುವಂತಹ ಕತಾಹಂದರವನ್ನು ರೂಪಿಸಿಕೊಂಡಿದ್ದೇವೆ. ಹೆಚ್ಚು ಪಾತ್ರಗಳನ್ನು ಕಟ್ಟಿಕೊಂಡಿದ್ದೇವೆ.

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿದ ಹಾಗೂ ಈಗ ಕೈಬಿಟ್ಟ ಕತಾ ಹಂದರವನ್ನು ಭೂತಗನ್ನಡಿಯಲ್ಲಿ ದಾಖಲಿಸುತ್ತಿದ್ದೇವೆ.

ಮಾತೇ ಆಡದ ಪೊಲೀಸ್ ಅಧಿಕಾರಿಯ ಕಿಡ್ನಾಪ್ ಆಗುತ್ತದೆ. ವಿಪರೀತ ವಾಚಾಳಿ, ಸೈದ್ಧಾಂತಿಕವಾಗಿ ವಿಪರೀತ ಪ್ರಭಾವಿತನಾದ ನಕ್ಸಲೈಟ್ ಸುಪರ್ದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಬಿಡಲಾಗುತ್ತದೆ. ಆತನ ಬಳಿ ಒಂದು ಮೊಬೈಲ್ ಫೋನ್ ಇರುತ್ತದೆ. ಆದರೆ ಅದಕ್ಕೆ ಇನ್ ಕಮಿಂಗ್ ಮಾತ್ರ ಇರುತ್ತದೆ.

ನಕ್ಸಲೈಟ್ ನಾಯಕರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪೊಲೀಸ್ ಅಧಿಕಾರಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಸರಕಾರದ ಜೊತೆಗೆ ಮಾತುಕತೆ ನಡೆಸುತ್ತಿರುತ್ತದೆ. ಫೋನ್ ಮೂಲಕ ಸೂಚನೆಗಳನ್ನು ನೀಡುತ್ತಿರುತ್ತಾರೆ.

ಒಂದು ದಿನ ಚೆನ್ನಾಗಿ ನೋಡಿಕೊಳ್ಳುವ, ಹಿಂಸಿಸಿ ಬಾಯಿ ಬಿಡಿಸುವ, ಆತನ ಯೋಗಕ್ಷೇಮಕ್ಕಾಗಿ ಆಡಿಯೋ ಟೇಪ್, ವಿಡಿಯೋ ಫೂಟೇಜ್ ಕಳಿಸುವ ಸೂಚನೆ ಸಿಕ್ಕುತ್ತದೆ.

ವಾಚಾಳಿಯಾದ ನಕ್ಸಲೈಟ್ ಮಾತಾಡಲು ಯಾರೊಬ್ಬರೂ ಇರದೆ, ಮೊಬೈಲ್ ನಲ್ಲೂ ಮಾತಾಡುವ ಅವಕಾಶವಿಲ್ಲದೆ ಮೌನಿ ಪೊಲೀಸ್ ಅಧಿಕಾರಿಯನ್ನೇ ಮಾತಿಗೆಳೆಯುತ್ತಾನೆ, ಮಾತಾಡುತ್ತ ಮಾತಾಡುತ್ತ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತೆ.

ಹೀಗಿರುವಾಗ ಆ ಪೊಲೀಸ್ ಅಧಿಕಾರಿಯನ್ನು ಕೊಂದು ಬರುವ ಸೂಚನೆ ಮೊಬೈಲ್ ನಲ್ಲಿ ಇವನಿಗೆ ಸಿಕ್ಕುತ್ತೆ.

ಈ ವಾರದ ಭೇಟಿಯಲ್ಲಿ ನಿಷ್ಕರ್ಷಿಸಿದ ಹೊಸ ಕತಾ ಹಂದರದ ಮೇಲೆ ಕೆಲಸ ನಡೆಯುತ್ತಿದೆ. ಇನ್ನು ಎರಡುವಾರದಲ್ಲಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರು ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ.

Friday, December 3, 2010

ಭೇಟಿ ಮುಂದೂಡಿಕೆ

ಕಳೆದ ವಾರದ ಭೇಟಿಯಲ್ಲಿ ನಾವು ನಿಷ್ಕರ್ಷಿಸಿದ ಕತೆಯನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಬರೆದುಕೊಂಡು ಬರುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಾರ್ಯ ಬಾಹುಳ್ಯದಿಂದಾಗಿ ಅದು ಪೂರ್ಣವಾಗಿಲ್ಲ.

ಹೀಗಾಗಿ ಈ ಶನಿವಾರದ ಭೇಟಿಯನ್ನು ರದ್ದು ಪಡಿಸಿ ಮುಂದಿನ ಶನಿವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಿ ಭೇಟಿಯಾಗುವುದಾಗಿ ತೀರ್ಮಾನಿಸಲಾಗಿದೆ.

ಡಿಸೆಂಬರ್ ಹನ್ನೊಂದನೆಯ ತಾರೀಖು ಭೇಟಿಯಾಗುವ ಸಂದರ್ಭದಲ್ಲಿ ಒಂದು ಸಾಲಿನ ಸ್ಕ್ರಿಪ್ಟ್ ರೆಡಿಯಾಗಿರಬೇಕು ಎಂದು ಈ ಮೂಲಕ ತಿಳಿಸಲಾಗುತ್ತಿದೆ.